Saturday, 3 May 2014

ಜ್ಯೋತಿಷಿಗಳು ನೀಡುವ ಪುಕ್ಕಟೆ ಸಲಹೆಗಳೂ ತಮಾಷೆಯಾಗಿರುತ್ತವೆ.

ತಾವೊಬ್ಬ ಜ್ಯೋತಿಷಿ ಎಂದು ಹೇಳಿಕೊಂಡು ಜನಮನ ಸೆಳೆದಿದ್ದ ವ್ಯಕ್ತಿಯೊಬ್ಬರ ರಾಸಲೀಲೆ ಪ್ರಕರಣ, ಜ್ಯೋತಿಷ್ಯ ವಾಣಿಯಲ್ಲಿ ಮೈಮರೆಯುವ
ಜನಸಾಮಾನ್ಯರನ್ನು ದಂಗುಪಡಿಸಿದೆ. ಬೆಂಗಳೂರಿನ
ಮನೆಯೊಂದರಲ್ಲಿ ಜ್ಯೋತಿಷ್ಯ ಕೇಂದ್ರ
ಸ್ಥಾಪಿಸಿದ್ದ ಆ ಸ್ವಯಂಘೋಷಿತ ಜ್ಯೋತಿಷಿ,
ಯುವತಿಯರ ಜತೆ ಸರಸವಾಡುತ್ತಿರುವ ಸಿಸಿ ಟಿ.ವಿ. ದೃಶ್ಯಾವಳಿಗಳು ಈಗ ಚರ್ಚೆಗೆ ಗ್ರಾಸವಾಗಿವೆ.
ಜ್ಯೋತಿಷ್ಯದ ಹೆಸರಿನಲ್ಲಿ ಜನರನ್ನು ವಂಚಿಸುತ್ತಿದ್ದ, ನಿಸ್ಸಹಾಯಕ
ಯುವತಿಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ
ಎಂಬುದು ಆ ವ್ಯಕ್ತಿಯ ಮೇಲಿನ ಆರೋಪ.
ಜ್ಯೋತಿಷಿಯ ಮುಖವಾಡ ಧರಿಸಿ ನಡೆಸುವ ವಂಚನೆ,
ದೌರ್ಜನ್ಯ ಮತ್ತು ಹಣ ಸುಲಿಗೆ ಪ್ರಕರಣಗಳು ಆಗಾಗ
ವರದಿಯಾಗುತ್ತಲೇ ಇರುತ್ತವೆ.
ಇಷ್ಟಾಗಿಯೂ ಸಾರ್ವಜನಿಕರು ಜಾಗೃತರಾಗದೆ, ಮತ್ತೆ
ಮತ್ತೆ ಇಂಥ ಕೃತ್ಯಗಳಿಗೆ ಪರೋಕ್ಷವಾಗಿ
ಪ್ರೋತ್ಸಾಹಿಸುವುದು ವಿಷಾದನೀಯ.
ಜ್ಯೋತಿಷ್ಯವೂ ಒಂದು ವಿಜ್ಞಾನ,
ಅದರಲ್ಲೂ ಸತ್ಯಾಂಶವಿದೆ ಎಂಬ ವಾದವಿದೆ. ಆದರೆ
ಇತಿಮಿತಿಯಲ್ಲಿ ಇದನ್ನು ಬಳಸುವುದನ್ನು ಬಿಟ್ಟು,
ಕೆಲವರು ಮಿತಿಮೀರಿ ಜ್ಯೋತಿಷ್ಯದ
ಅಡಿಯಾಳಾಗಿಬಿಟ್ಟಿದ್ದಾರೆ. ಬರಬರುತ್ತ ಹುಸಿ
ಜ್ಯೋತಿಷ್ಯದ ಅಬ್ಬರ ಜೋರಾಗುತ್ತಿದೆ.
'ಕೆಟ್ಟು ಪಟ್ಟಣ ಸೇರಿದ' ಎಂಬ ಹಳೆಯ ನಾಣ್ಣುಡಿ
ಈಗ 'ಕೆಟ್ಟು ಜ್ಯೋತಿಷಿಯಾದ' ಎಂದು ಬದಲಾಗಿದೆ.
ಎಸ್ಸೆಸ್ಸೆಲ್ಸಿ ಪಾಸಾಗಲಾಗದವರು, ಬೀಡಾ ಅಂಗಡಿ
ಇಟ್ಟು ದಿವಾಳಿಯಾದವರು, ಜನರಿಗೆ ಮೋಸ ಮಾಡಿ
ಊರಿನಿಂದ ಹೊರದಬ್ಬಲ್ಪಟ್ಟವರು, ಸಣ್ಣಪುಟ್ಟ
ಕ್ರಿಮಿನಲ್ ಕೃತ್ಯ ಎಸಗಿ ಜೈಲು ನೋಡಿ
ಬಂದವರೂ ಈಗೀಗ ಅರೆಬರೆ ಜ್ಯೋತಿಷ್ಯ
ಓದಿಕೊಂಡು ಜನರಿಗೆ ಸಾಂತ್ವನ ಹೇಳುವ
ಕಸುಬಿಗಿಳಿದಿದ್ದಾರೆ.
ಜ್ಯೋತಿಷ್ಯ ಈಗ ಸುಲಭವಾಗಿ ದುಡ್ಡು ಮಾಡುವ
ದಂಧೆಯಾಗಿಬಿಟ್ಟಿದೆ. ನಾನಾ ಕಾರಣಗಳಿಂದ
ಜೀವನದಲ್ಲಿ ನೊಂದ ಜನ ಪರಿಹಾರ
ಅರಸುತ್ತಾ ಜ್ಯೋತಿಷಿಗಳ ಹುಂಡಿಗೆ ಹಣ
ಚೆಲ್ಲುತ್ತಿದ್ದಾರೆ. ಕಷ್ಟ ಪರಿಹಾರದ ಹೆಸರಿನಲ್ಲಿ
ಬೃಹತ್ ಮೈದಾನದಲ್ಲಿ ಹೋಮ, ಹವನ ಏರ್ಪಡಿಸುವ
ಕೆಲ ಜ್ಯೋತಿಷಿಗಳು, ಒಂದೇ ದಿನದಲ್ಲಿ ಲಕ್ಷಾಂತರ
ರೂಪಾಯಿ ಕಮಾಯಿಸುತ್ತಿದ್ದಾರೆ. ಈ
ಜ್ಯೋತಿಷಿಗಳು ನೀಡುವ ಪುಕ್ಕಟೆ
ಸಲಹೆಗಳೂ ತಮಾಷೆಯಾಗಿರುತ್ತವೆ. ಒಂದು ಕಡೆ ಒಬ್ಬ
ಜ್ಯೋತಿಷಿ, ''ಗೂಬೆ ಅನಿಷ್ಟ. ಗೂಬೆ ಹೊಕ್ಕ ಮನೆ
ತೊರೆಯಬೇಕು,'' ಎಂದರೆ, ಮತ್ತೊಂದು ಕಡೆ
ಇನ್ನೊಬ್ಬ ಜ್ಯೋತಿಷಿ, ''ಬೆಳಗ್ಗೆ ಎದ್ದ
ಕೂಡಲೇ ಗೂಬೆಯ ಮುಖ ನೋಡಿದರೆ ಶುಭವಾಗುತ್ತದೆ.
ಜೀವಂತ ಗೂಬೆಯನ್ನು ಸಾಕಲು ಆಗದಿದ್ದರೆ ಬೆಳ್ಳಿಯ
ಗೂಬೆಯನ್ನಾದರೂ ಮಾಡಿಸಿ ಅದರ ಮುಖ ನೋಡಿ,''
ಎನ್ನುತ್ತಾನೆ! ಅತ್ತೆಯನ್ನು ಪಳಗಿಸುವುದು ಹೇಗೆ,
ಸೊಸೆಯನ್ನು ಮನೆಯಿಂದ ಹೊರ ಹಾಕುವುದು ಹೇಗೆ,
ಪರಸ್ತ್ರೀಯರನ್ನು ಒಲಿಸಿಕೊಳ್ಳುವುದು ಹೇಗೆ ಎಂಬ
ಉಪಾಯವನ್ನೂ ಇವರು ಮುಲಾಜಿಲ್ಲದೆ
ಹೇಳುತ್ತಾರೆ! ವೈಜ್ಞಾನಿಕ ಪ್ರಜ್ಞೆಯತ್ತ ಮುಖ
ಮಾಡಿದ್ದ ಜನ ಈ ಅರೆಬೆಂದ ಜ್ಯೋತಿಷಿಗಳಿಂದಾಗಿ
ಮತ್ತೆ ಮೌಢ್ಯದ ಕೂಪದತ್ತ
ತೆವಳುತ್ತಿರುವುದು ಕಳವಳಕಾರಿ. ನಕಲಿ ಮತ್ತು ವಂಚಕ
ಜ್ಯೋತಿಷಿಗಳ ವಿರುದ್ಧ ಸರಕಾರ ಕಠಿಣ ಕ್ರಮ
ಕೈಗೊಳ್ಳುವ ಮೂಲಕ ಸಮಾಜದ ಸ್ವಾಸ್ಥ್ಯ
ಕಾಪಾಡಬೇಕು. ಎಲ್ಲ ದೃಷ್ಟಿಕೋನಗಳಿಂದ ಚರ್ಚಿಸಿ,
ಸಾಧಕ-ಬಾಧಕಗಳನ್ನು ಸಮಚಿತ್ತದಿಂದ ಅವಲೋಕಿಸಿ
ಮೌಢ್ಯ ಪ್ರತಿಬಂಧಕ ಕಾಯಿದೆ ಜಾರಿ ಮಾಡುವತ್ತ
ಕಾರ್ಯೋನ್ಮುಖವಾಗಬೇಕು. ಸಾರ್ವಜನಿಕರೂ ಢೋಂಗಿ
ಜ್ಯೋತಿಷಿಗಳ ಮಾತಿಗೆ ಮರುಳಾಗದೆ, ಅಂಥವರ
ವಿರುದ್ಧ ದನಿ ಎತ್ತಬೇಕು.

No comments:

Post a Comment